15 ಲಕ್ಷ ನಗದು, 450 ಸೀರೆ, ಬೆಳ್ಳಿ ವಶ

26-04-2018
ಬೆಂಗಳೂರು: ತಿಲಕ್ನಗರದ ಬಳಿ ದಾಖಲೆಯಿಲ್ಲದೇ ದಂಪತಿಯು ಸ್ಕೂಟರ್ ನ ಡಿಕ್ಕಿಯಲ್ಲಿಟ್ಟುಕೊಂಡು ಸಾಗಿಸುತ್ತಿದ್ದ 15 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಿಲಕನಗರ ಪೊಲೀಸ್ ಠಾಣೆಯ ಸಮೀಪದ ಎಸ್ಎಲ್ಎನ್ ಹೊಟೇಲ್ ಬಳಿ ಸುಜುಕಿ ಅಕ್ಸಿಸ್ ಬೈಕ್ನಲ್ಲಿ ಮೀರ್ ಇಕ್ಬಾಲ್ ಅಹಮದ್ ಹಾಗೂ ಶಮೀನಾ ಬಾನು ದಂಪತಿ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇಲೆ ಇನ್ಸ್ಪೆಪೆಕ್ಟರ್ ನಂಜೇಗೌಡ ಅವರು ತಡೆದು ತಪಾಸಣೆ ನಡೆಸಿದಾಗ ಸ್ಕೂಟರ್ ನ ಡಿಕ್ಕಿಯಲ್ಲಿದ್ದ 15 ಲಕ್ಷ ಪತ್ತೆಯಾಗಿದೆ.
ಹಣವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ದಂಪತಿಯು ಕಂಪನಿಯೊಂದರಲ್ಲಿ ಹಣ ಹೂಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಯಾವುದೇ ದಾಖಲಾತಿಗಳನ್ನು ಒದಗಿಸಿರುವುದಿಲ್ಲ ಈ ಸಂಬಂಧ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ದೇವನಹಳ್ಳಿಯ ನವಯುಗ ಟೋಲ್ ಚೆಕ್ ಪೋಸ್ಟ್ ಬಳಿ ಖಾಸಗಿ ಬಸ್ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 10 ಕೆಜಿ ತೂಕದ ಬೆಳ್ಳಿ ಕಾಲ್ಚೈನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ನಿಂದ ಸೇಲಂ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ನ್ನು ತಡೆದು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಬೆಳ್ಳಿ ಕಾಲ್ಚೈನ್ಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು ಅವುಗಳನ್ನು ಹಾಗೂ ಬೆಳ್ಳಿಯನ್ನು ಸಾಗಿಸುತ್ತಿದ್ದ ಸೇಲಂ ಮೂಲದ ಜಾಕೀರ್ ನನ್ನು ವಶಕ್ಕೆ ಪಡೆದು ದೇವನಹಳ್ಳಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ದೇವನಹಳ್ಳಿಯ ಪೂಜೇನಹಳ್ಳಿ ಗೇಟ್ ಬಳಿ ಖಾಸಗಿ ಬಸ್ಗಳಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ 425 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ಎರಡು ಬಸ್ಗಳಲ್ಲಿ ಇಬ್ಬರು ಈ ಸೀರೆಗಳನ್ನು ಸಾಗಿಸುತ್ತಿದ್ದು ತಪಾಸಣೆಯಲ್ಲಿ ಪತ್ತೆಯಾಗಿವೆ.
ಒಂದು ಕಮೆಂಟನ್ನು ಹಾಕಿ